ದಕ್ಷಿಣ ಕನ್ನಡ

​ಮಂಗಳೂರು: ಅತ್ಯುತ್ತಮ ಸೇವೆ ಸಲ್ಲಿಸಿದ 147 ಪೊಲೀಸ್ ಸಿಬ್ಬಂದಿಗೆ ಆಯುಕ್ತರಿಂದ ಗೌರವ, ಪ್ರಶಂಸನಾ ಪತ್ರ ವಿತರಣೆ

 


ನ್ಯೂಸ್ 2 ಡೇ ಕನ್ನಡ, ಮಂಗಳೂರು:

ಕರ್ತವ್ಯದಲ್ಲಿ ಅಸಾಧಾರಣ ಕಾರ್ಯದಕ್ಷತೆ, ಅಪರಾಧ ತಡೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗಮನಾರ್ಹ ಸಾಧನೆಗೆ ಕಾರಣರಾದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ಗೌರವ ಸಮರ್ಪಿಸಲಾಗಿದೆ.

​ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಪೊಲೀಸ್ ಅಧಿಕಾರಿಗಳು ಹಾಗೂ 118 ಸಿಬ್ಬಂದಿ ಒಟ್ಟು 147 ಜನರಿಗೆ ಮಾನ್ಯ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು.


ಪ್ರಮುಖ ಸಾಧನೆಗಳ ವಿವರ:

  • ದೀರ್ಘಕಾಲದ ಬಾಕಿ ಪ್ರಕರಣಗಳು (LPC): ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್‌ಬಿಡಬ್ಲ್ಯೂ (NBW) ವಾರಂಟ್ ಹೊಂದಿದ್ದ ಆರೋಪಿಗಳು ಸೇರಿದಂತೆ ಒಟ್ಟು 24 ಎಲ್.ಪಿ.ಸಿ ಪ್ರಕರಣಗಳ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.
  • ಕಳವು ಸೊತ್ತು ವಶ: 2026ರಲ್ಲಿ ವರದಿಯಾದ ಕಳವು ಪ್ರಕರಣಗಳ ಪೈಕಿ 88 ಪ್ರಕರಣಗಳನ್ನು ಭೇದಿಸಲಾಗಿದ್ದು, ಸುಮಾರು ₹1.20 ಕೋಟಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
  • ಮಾದಕದ್ರವ್ಯ ಜಾಲಕ್ಕೆ ಪೆಟ್ಟು: ಗಾಂಜಾ ಹಾಗೂ ಮಾದಕ ವಸ್ತುಗಳ ಸಾಗಾಟ/ಮಾರಾಟಕ್ಕೆ ಸಂಬಂಧಿಸಿದಂತೆ 84 ಪ್ರಕರಣಗಳನ್ನು ದಾಖಲಿಸಿ, 142 ಪೆಡ್ಲರ್‌ಗಳನ್ನು ಜೈಲಿಗಟ್ಟಲಾಗಿದೆ. ಹಾಗೆಯೇ, ಸೇವನೆಗೆ ಸಂಬಂಧಿಸಿದಂತೆ 443 ಜನರನ್ನು (346 ಪ್ರಕರಣಗಳು) ವಶಕ್ಕೆ ಪಡೆದು, ಅವರಿಂದ ಪೆಡ್ಲರ್‌ಗಳ ಮಾಹಿತಿ ಕಲೆಹಾಕಿ ಮುಂದಿನ ಜಾಲವನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಲಾಗಿದೆ.
  • ಅಂತರರಾಷ್ಟ್ರೀಯ ಸೈಬರ್ ವಂಚನೆ ಜಾಲ ಭೇದಿಸಿದ ತಂಡ: ನೇಪಾಳ ಮೂಲದಿಂದ ದೇಶಾದ್ಯಂತ ನಡೆಯುತ್ತಿದ್ದ ಹೂಡಿಕೆ ವಂಚನೆ (Investment Fraud) ಜಾಲವನ್ನು ಭೇದಿಸಿದ ಮತ್ತು ಸೈಬರ್ ವಂಚನೆಯಾದ ತಕ್ಷಣ '1930' ಸಹಾಯವಾಣಿ ಮೂಲಕ ಹಣ ಮರುಪಡೆಯಲು ನೆರವಾದ ಅಧಿಕಾರಿಗಳನ್ನು ವಿಶೇಷವಾಗಿ ಶ್ಲಾಘಿಸಲಾಯಿತು. ಸೈಬರ್ ಜಾಗೃತಿಯಿಂದಾಗಿ ನಗರದಲ್ಲಿ ಪ್ರಕರಣಗಳು ಇಳಿಮುಖವಾಗಿವೆ.
  • ಕೋಮು ಸೌಹಾರ್ದ ಹಾಗೂ ಸಾಮಾಜಿಕ ಜಾಲತಾಣ ನಿಗಾ: ಸೋಶಿಯಲ್ ಮೀಡಿಯಾದಲ್ಲಿ ದ್ವೇಷ ಭಾಷಣ, ಅಪಪ್ರಚಾರ ಮತ್ತು ಶಾಂತಿ ಕದಡುವ ಯತ್ನಗಳ ಮೇಲೆ ತೀವ್ರ ನಿಗಾ ವಹಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಪ್ರಕರಣ ದಾಖಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ.
  • ತನಿಖೆ ಹಾಗೂ ತುರ್ತು ಸೇವೆ (112): ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ತನಿಖಾಧಿಕಾರಿಗಳು, ಪ್ರಮುಖ ಬಂದೋಬಸ್ತ್ ನಿರ್ವಹಿಸಿದ ಸಿಬ್ಬಂದಿ ಮತ್ತು '112 ತುರ್ತು ಸೇವೆ' ಹಾಗೂ ನಿಸ್ತಂತು ವಿಭಾಗದ ಸಿಬ್ಬಂದಿಯ ಕಾರ್ಯವೈಖರಿಯನ್ನು ಈ ಸಂದರ್ಭದಲ್ಲಿ ಮೆಚ್ಚಿ ಗೌರವಿಸಲಾಯಿತು.                                                       



image