ದಕ್ಷಿಣ ಕನ್ನಡ

Bantwal :ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನ: ಅನ್ನಪ್ರಸಾದ, ಮದುವೆ ಹಾಗೂ ಅಗರ್‌ಬತ್ತಿ ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿ


ಬಂಟ್ವಾಳ: ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಸೌಕರ್ಯ ಹಾಗೂ ಕ್ಷೇತ್ರದ ಧಾರ್ಮಿಕ ಪದ್ಧತಿ-ಸಂಪ್ರದಾಯಗಳನ್ನು ಕಾಪಾಡುವ ನಿಟ್ಟಿನಲ್ಲಿ ದೈವಸ್ಥಾನದ ಆಡಳಿತ ಮಂಡಳಿಯು ಹಲವು ಪ್ರಮುಖ ಸೂಚನೆಗಳನ್ನು ಹೊರಡಿಸಿದೆ.

​ಧಾರ್ಮಿಕ ಪದ್ಧತಿಯಂತೆ ಮಕ್ಕಳಿಗೆ ಚೊಚ್ಚಲ ಬಾರಿಗೆ ಅನ್ನ ಉಣಿಸುವ (ಅನ್ನಪ್ರಾಶನ) ಹರಕೆ ಕೊಡುವ ಭಕ್ತರ ಅನುಕೂಲಕ್ಕಾಗಿ, ಇನ್ನು ಮುಂದೆ 6 ತಿಂಗಳಿಂದ 1 ವರ್ಷದೊಳಗಿನ ಮಕ್ಕಳಿಗೆ ಮಾತ್ರ ದೈವಸ್ಥಾನದಲ್ಲಿ ಅನ್ನಪ್ರಸಾದ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

​ಇದರೊಂದಿಗೆ, ದೈವಸ್ಥಾನದ ಆವರಣದಲ್ಲಿ ಯಾವುದೇ ಕಾರಣಕ್ಕೂ ಬಾಲ್ಯವಿವಾಹ ನಡೆಸಬಾರದು ಎಂದು ಭಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾನೂನುಬಾಹಿರ ಕಾರ್ಯಗಳಿಗೆ ಕ್ಷೇತ್ರದಲ್ಲಿ ಆಸ್ಪದವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

​ಇನ್ನೊಂದು ಪ್ರಮುಖ ನಿರ್ಧಾರವೆಂದರೆ, ದೈವಸ್ಥಾನದ ಸ್ವಚ್ಛತೆ ಮತ್ತು ಪವಿತ್ರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಆಗಸ್ಟ್ 18ರಿಂದ ಜಾರಿಗೆ ಬರುವಂತೆ ದೈವಸ್ಥಾನದ ಮುಂಭಾಗ ಹಾಗೂ ಆವರಣದಲ್ಲಿ ಅಗರ್‌ಬತ್ತಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

​ಕ್ಷೇತ್ರದ ನಿಯಮಗಳು ಮತ್ತು ಸನಾತನ ಸಂಪ್ರದಾಯಗಳಿಗೆ ಭಕ್ತಾದಿಗಳು ಪೂರ್ಣ ಸಹಕಾರ ನೀಡಬೇಕಾಗಿ ಕಾರ್ಯನಿರ್ವಹಣಾಧಿಕಾರಿಗಳು ವಿನಂತಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ದೈವಸ್ಥಾನದ ಅಧಿಕೃತ ಕಚೇರಿ ದೂರವಾಣಿ ಸಂಖ್ಯೆ: 7090280166 ಅನ್ನು ಸಂಪರ್ಕಿಸಬಹುದು.



image