ದಕ್ಷಿಣ ಕನ್ನಡ

ಕಡಬ: ಸುಂಟರಗಾಳಿಗೆ ಧರೆಗುರುಳಿದ ಅಡಿಕೆ ಮರ; ತೋಟದಲ್ಲಿದ್ದ ಹಿರಿಯ ಜೀವ ಸ್ಥಳದಲ್ಲೇ ಬಲಿ!

 


ಕಡಬ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನಾರ್ಭಟ ಹಾಗೂ ಬಿರುಗಾಳಿ ತೀವ್ರಗೊಂಡಿದ್ದು, ದುರಂತವೊಂದಕ್ಕೆ ಕಡಬ ತಾಲೂಕು ಸಾಕ್ಷಿಯಾಗಿದೆ. ತೋಟದಲ್ಲಿ ಕೆಲಸ ನಿರತರಾಗಿದ್ದ ವ್ಯಕ್ತಿಯೊಬ್ಬರ ಮೇಲೆ ಏಕಾಏಕಿ ಅಡಿಕೆ ಮರ ಮುರಿದುಬಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದ ಭೀಕರ ಘಟನೆ ಕುಂತೂರು ಗ್ರಾಮದ ಕೇವಳ ಎಂಬಲ್ಲಿ ಸಂಭವಿಸಿದೆ.

​ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ (66) ಮೃತಪಟ್ಟ ದುರ್ದೈವಿ.

ಘಟನೆಯ ವಿವರ:

ಶುಕ್ರವಾರದಂದು ಯಾದವ ಗೌಡ ಅವರು ತಮ್ಮ ಅಡಿಕೆ ತೋಟದಲ್ಲಿ ದೈನಂದಿನ ಕೃಷಿ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಗಾಳಿ ಸಹಿತ ಭಾರಿ ಮಳೆ ಸುರಿಯಲಾರಂಭಿಸಿದೆ. ಈ ಸಂದರ್ಭದಲ್ಲಿ ಬೀಸಿದ ರಭಸದ ಗಾಳಿಗೆ ಸಮೀಪದಲ್ಲಿದ್ದ ಅಡಿಕೆ ಮರವೊಂದು ಧರೆಗುರುಳಿ ಯಾದವ ಗೌಡ ಅವರ ಮೇಲೆಯೇ ಬಿದ್ದಿದೆ. ಪರಿಣಾಮ ತಲೆ ಹಾಗೂ ದೇಹಕ್ಕೆ ಗಂಭೀರ ಸ್ವರೂಪದ ಪೆಟ್ಟು ಬಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

​ದುರಂತದ ಸುದ್ಧಿ ತಿಳಿಯುತ್ತಿದ್ದಂತೆಯೇ ಕಡಬ ತಹಶೀಲ್ದಾರ್ ಗಣೇಶ್ ಸವಣೂರ, ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳು ಹಾಗೂ ಕಡಬ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.



image