ದಕ್ಷಿಣ ಕನ್ನಡ

​ಮಂಗಳೂರು : ಮಂಗಳೂರಿನಲ್ಲಿ ಆ.18 ರಂದು ‘ನಮ್ಮ ಕಂಬಳ 2025-26’ ಪ್ರಶಸ್ತಿ ಪ್ರದಾನ ಸಮಾರಂಭ

 


ಮಂಗಳೂರು: ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 'ನಮ್ಮ ಕುಡ್ಲ ಚಾನಲ್' ಮತ್ತು 'ನಮ್ಮ ಕಂಬಳ ಟೀಂ ದುಬೈ' ಜಂಟಿ ಆಶ್ರಯದಲ್ಲಿ ‘ನಮ್ಮ ಕಂಬಳ 2025-26’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಈ ವೈಭವದ ಕಾರ್ಯಕ್ರಮವು ಆಗಸ್ಟ್ 18ರ ಮಂಗಳವಾರ ಸಂಜೆ 4 ಗಂಟೆಗೆ ಮಂಗಳೂರಿನ ಮೇರಿಹಿಲ್ ಕೊಂಚಾಡಿಯ ಪಾಲೆಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

​ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಅವರು, "ನಮ್ಮ ಕುಡ್ಲ ವಾಹಿನಿಯು ಪ್ರತಿವರ್ಷ ಜರುಗುವ ಎಲ್ಲಾ ಕಂಬಳಗಳ ನೇರ ಪ್ರಸಾರವನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. ಕಂಬಳ ಕ್ರೀಡೆಯನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಈ ವರ್ಷ 3ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ" ಎಂದರು.

​23 ಕಂಬಳಗಳ ಸಮಗ್ರ ಸಾಧನೆಗೆ ಪುರಸ್ಕಾರ

​ವಾಹಿನಿಯ ಸಿಒಒ ಕದ್ರಿ ನವನೀತ ಶೆಟ್ಟಿ ಮಾತನಾಡಿ, "2025ರ ನವೆಂಬರ್ 15ರಂದು ಪಣಪಿಲ ಜಯ ವಿಜಯ ಕಂಬಳದೊಂದಿಗೆ ಆರಂಭಗೊಂಡ ಋತುವು, 2026ರ ಏಪ್ರಿಲ್ 4ರ ಬಳ್ಳುಂಜೆ ಕರಿಯ ದೇಸಿಂಗ-ಬೊಲಿಯ ದೇಸಿಂಗ ಕಂಬಳದವರೆಗೆ ಒಟ್ಟು 23 ಕೂಟಗಳೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಪೈಕಿ ಎಲ್ಲಾ ವಿಭಾಗಗಳನ್ನು ಹೊಂದಿದ್ದ 21 ಕಂಬಳಗಳ ಸಾಧನೆಯನ್ನು ಆಧಾರವಾಗಿಟ್ಟುಕೊಂಡು, ಅತ್ಯಧಿಕ ಪದಕ ಗೆದ್ದ ಕೋಣಗಳ ಯಜಮಾನರು, ಓಟಗಾರರು ಹಾಗೂ ವಿಜೇತ ಕೋಣಗಳಿಗೆ ಸರಣಿ ಶ್ರೇಷ್ಠ ಪ್ರಥಮ, ದ್ವಿತೀಯ ಮತ್ತು ತೃತೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು" ಎಂದು ವಿವರಿಸಿದರು.

​ಈ ಬಾರಿಯ ವಿಶೇಷ ಪುರಸ್ಕಾರಗಳು:

  • ಕಂಬಳ ಬೊಳ್ಳಿ-2026: ಹಿರಿಯ ಓಟಗಾರ, ಕ್ರೀಡಾರತ್ನ ನಕ್ರೆ ಜಯಕರ ಮಡಿವಾಳ ಅವರಿಗೆ ಪ್ರದಾನ.
  • ನಮ್ಮ ಕುಡ್ಲ ಶ್ರೇಷ್ಠ ಕೋಣ ಪ್ರಶಸ್ತಿ: ಅಪಾರ ಅಭಿಮಾನಿ ಬಳಗ ಹೊಂದಿರುವ ಇರುವೈಲ್ ಪಾಣಿಲ 'ತಾಟೆ' ಮತ್ತು ಬೋಳದಗುತ್ತು 'ದೋಣಿ' ಕೋಣಗಳಿಗೆ ಗೌರವ.
  • ವಿಶೇಷ ಸನ್ಮಾನ: ಕಂಬಳ ಕ್ಷೇತ್ರದ ಏಕೈಕ ಮಹಿಳಾ ಸಂಘಟಕಿ ಮಲ್ಲಿಕಾ ಯಶವಂತ ಶೆಟ್ಟಿ ಅವರಿಗೆ ವಿಶೇಷ ಗೌರವ.
  • ​ಇದರೊಂದಿಗೆ ಕಂಬಳದ ಸಂಯೋಜಕರು, ತೀರ್ಪುಗಾರರು, ನಿರ್ವಾಹಕರು ಹಾಗೂ ಅನುಭವೀ ಕೋಣ ಬಿಡಿಸುವವರಿಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.


ಗಣ್ಯರ ಉಪಸ್ಥಿತಿ

​ಆಗಸ್ಟ್ 18ರಂದು ನಡೆಯಲಿರುವ ಈ ಕಾರ್ಯಕ್ರಮವನ್ನು ಮೂಲ್ಕಿ ಸೀಮೆ ಅರಸು ಕಂಬಳದ ದುಗ್ಗಣ್ಣ ಸಾವಂತರಸರು ಉದ್ಘಾಟಿಸಲಿದ್ದಾರೆ. ಎಂ.ಆರ್.ಜಿ. ಗ್ರೂಪ್ ಸಂಸ್ಥಾಪಕ ಡಾ. ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.

​ಇದೇ ವೇಳೆ 2025ರ ಕಂಬಳ ಋತುವಿನ ಸಮಗ್ರ ಮಾಹಿತಿ ಒಳಗೊಂಡ ‘ನಮ್ಮ ಕಂಬಳ 2025-26’ ಮಾಹಿತಿ ಕೈಪಿಡಿಯನ್ನು ಶಶಿ ಕ್ಯಾಟರಿಂಗ್ ಸರ್ವಿಸಸ್ ಬರೋಡದ ಸಂಸ್ಥಾಪಕ ಶಶಿಧರ ಬಿ. ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದಲ್ಲಿ ಸಚಿವ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

​ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲು ಮಾತನಾಡಿ, "ನಮ್ಮ ಕುಡ್ಲ ವಾಹಿನಿಯು ಕಂಬಳದ ಎಲ್ಲಾ 6 ವಿಭಾಗಗಳನ್ನು ನಿಖರವಾಗಿ ವಿಶ್ಲೇಷಿಸಿ, ಅಳೆದು ತೂಗಿ ಅತ್ಯಂತ ಪಾರದರ್ಶಕವಾಗಿ ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ" ಎಂದರು.

​ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಸಂತೋಷ್ ಬಿ. ಕರ್ಕೇರ ಹಾಗೂ ಮ್ಯಾನೇಜರ್ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು.



image