ಸಂತಪುರ (ಬೀದರ್): ಹುಟ್ಟಿದ ಎರಡೇ ತಿಂಗಳಿಗೆ ಹಸುಗೂಸೊಂದನ್ನು ಹೆತ್ತ ತಾಯಿ ಹಾಗೂ ಆಕೆಯ ಹೆತ್ತವರೇ ಸೇರಿ ಬಾವಿಗೆ ಎಸೆದು ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಔರಾದ ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮಗುವಿನ ತಾಯಿ ವಾಣಿಶ್ರೀ (32), ಸೋದರ ಮಾವ ಸಂತೋಷ್ ಮಸ್ಕಲೆ (35), ಅಜ್ಜ ಬಸಪ್ಪ (70) ಹಾಗೂ ಅಜ್ಜಿ ರತ್ನಮ್ಮ (65) ಬಂಧಿತ ಆರೋಪಿಗಳು.
ಘಟನೆಯ ವಿವರ:
ವಾಣಿಶ್ರೀ ಅವರನ್ನು ಮಹಾರಾಷ್ಟ್ರದ ಕವಳಗಡ ಗ್ರಾಮದ ಸಂಜಯ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಹೆರಿಗೆಯ ಬಳಿಕ ವಾಣಿಶ್ರೀ ವಡಗಾಂವನಲ್ಲಿರುವ ತಮ್ಮ ತವರು ಮನೆಯಲ್ಲಿದ್ದರು. ಆದರೆ, ಇದ್ದಕ್ಕಿದ್ದಂತೆ ಎರಡು ತಿಂಗಳ ಮಗು ನಾಪತ್ತೆಯಾಗಿದೆ ಎಂದು ಕುಟುಂಬಸ್ಥರು ನಾಟಕವಾಡಿದ್ದರು. ಆ ಬಳಿಕ "ಮಗುವನ್ನು ದೇವರೇ ಕರೆದುಕೊಂಡು ಹೋದ" ಎಂದು ಜನರನ್ನು ನಂಬಿಸಲು ಹಸಿಸುಳ್ಳಿನ ಕಥೆ ಕಟ್ಟಿದ್ದರು.
ಕುಟುಂಬಸ್ಥರ ನಡೆ-ನುಡಿಯಲ್ಲಿ ಅನುಮಾನಗೊಂಡ ಸಂತಪುರ ಠಾಣೆಯ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಹತ್ಯೆಯ ಅಸಲಿ ಕೃತ್ಯ ಹೊರಬಿದ್ದಿದೆ.
ತನಿಖೆ ಮುಂದುವರಿಕೆ:
ತಾಯಿ ಮತ್ತು ಆಕೆಯ ಕುಟುಂಬಸ್ಥರೇ ಸೇರಿ ಹಸುಗೂಸನ್ನು ಕೊಲೆ ಮಾಡಲು ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಈ ಕುರಿತು ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.