ದಕ್ಷಿಣ ಕನ್ನಡ

Belthangady : ನಾಪತ್ತೆಯಾಗಿದ್ದ ಕೊಯ್ಯೂರು ನಿವಾಸಿ ನದಿಯಲ್ಲಿ ಶವವಾಗಿ ಪತ್ತೆ!

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಕಣಿಯೂರು ಗ್ರಾಮದ ಪೆರಡಾಳ ಸಮೀಪ ನದಿಯಲ್ಲಿ ಪತ್ತೆಯಾದ ಘಟನೆ ಆ.8 ರಂದು ನಡೆದಿದೆ.

​ಕೊಯ್ಯೂರು ಗ್ರಾಮದ ಕೊಂಕದಡ್ಕ ನಿವಾಸಿ ಚಿದಾನಂದ ಅಲಿಯಾಸ್ ಉಮೇಶ್ ಗೌಡ (52) ಮೃತಪಟ್ಟ ದುರ್ದೈವಿ.

​ಘಟನೆಯ ವಿವರ:

ಚಿಕ್ಕಮಗಳೂರು ಜಿಲ್ಲೆಯ ಆಲೂರಿನಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಗೌಡ ಅವರು ಆಗಸ್ಟ್ 5 ರಂದು ಅಲ್ಲಿಂದ ಸ್ವಗ್ರಾಮಕ್ಕೆ ಹೊರಟಿದ್ದರು. ಆದರೆ, ಅವರು ಮನೆಗೆ ತಲುಪಿರಲಿಲ್ಲ. ಕುಟುಂಬಸ್ಥರು ಹಾಗೂ ಸಂಬಂಧಿಕರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

​ಈ ನಡುವೆ ಆಗಸ್ಟ್ 8 ರಂದು ಕಣಿಯೂರು ಗ್ರಾಮದ ಪೆರಡಾಳ ಎಂಬಲ್ಲಿ ನದಿ ದಂಡೆಯ ಪೊದೆಯೊಂದರಲ್ಲಿ ಮೃತದೇಹ ಸಿಲುಕಿಕೊಂಡಿರುವುದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತರ ಪತ್ನಿ ಭವಾನಿ ಅವರು ಮೃತದೇಹವನ್ನು ಗುರುತಿಸಿದ್ದಾರೆ.

​ವಿಪರೀತ ಮದ್ಯಪಾನದ ಚಟ ಹೊಂದಿದ್ದ ಉಮೇಶ್ ಗೌಡ ಅವರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿರಬಹುದು ಅಥವಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪತ್ನಿ ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



image