ಮಂಗಳೂರು: ಸಂವಿಧಾನ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳೊಂದಿಗೆ ಅಖಂಡ ಕರ್ನಾಟಕದಲ್ಲಿ ಸಮಾನತೆಯ ಸಮಾಜ ನಿರ್ಮಿಸುವ ಗುರಿಯಿಟ್ಟುಕೊಂಡು, ಶೀಘ್ರದಲ್ಲೇ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರುವುದಾಗಿ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ತಿಳಿಸಿದ್ದಾರೆ.
ಶನಿವಾರ ಮಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ಪ್ರಸ್ತುತ ರಾಜ್ಯದಲ್ಲಿರುವ ರಾಜಕೀಯ ಬೆಳವಣಿಗೆಗಳು ಹಾಗೂ ಸರಕಾರದ ಧೋರಣೆಗಳಿಗೆ ಜನಪರ ಆಡಳಿತವೇ ಸೂಕ್ತ ಪರಿಹಾರ. ಈ ನಿಟ್ಟಿನಲ್ಲಿ ವಿವಿಧ ಜನಪರ ಹೋರಾಟಗಾರರು ಮತ್ತು ಸಂಘಟನಾಕಾರರನ್ನು ಒಂದುಗೂಡಿಸಿ, ರಾಜ್ಯ ಮಟ್ಟದಲ್ಲಿ ಬಲವಾದ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸಲಾಗುವುದು" ಎಂದು ಹೇಳಿದರು.
ಪಕ್ಷದ ಹೆಸರು ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದ್ದು, ಮುಂಬರುವ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಪಕ್ಷವನ್ನು ಅಧಿಕೃತವಾಗಿ ರಂಗಕ್ಕೆ ತರಲು ಸಿದ್ಧತೆಗಳು ನಡೆಯುತ್ತಿವೆ. ಈ ಹೊಸ ರಾಜಕೀಯ ಪಯಣದ ಸಂಘಟನೆಗಾಗಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
